ಚಿತ್ರದುರ್ಗ: ನಟ ದರ್ಶನ್ & ಗ್ಯಾಂಗ್ನಿಂದ ರೇಣುಕಾಸ್ವಾಮಿಯ ಕೊಲೆಯಾಗಿದ್ದು, ಮೃತನ ಕುಟುಂಬಕ್ಕೆ ನಟ ಧ್ರುವ ಸರ್ಜಾ ಅವರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆಂದು ತಿಳಿದುಬಂದಿದೆ.
ಚಲನಚಿತ್ರ ವಾಣಿಜ್ಯ ಮಂಡಳಿವತಿಯಿಂದಲೂ ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗಿತ್ತು. ಇದರ ಬೆನ್ನಲ್ಲೇ ಧ್ರುವ ಸರ್ಜಾ ಅವರೂ ಫೋನ್ ಮಾಡಿ, ನಿಮ್ಮ ಕುಟುಂಬದ ಸಹಾಯಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಸಿನಿಮಾವೊಂದರ ವಿಚಾರವಾಗಿ ಅರ್ಜುನ್ ಸರ್ಜಾ & ದರ್ಶನ್ ನಡುವೆ ವಿವಾದವಾಗಿತ್ತು. ಅದರಿಂದ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆ ಸಂಬಂಧ ಸರಿ ಇರಲಿಲ್ಲ ಎಂಬ ಸುದ್ದಿ ಹರಿದಾಡಿದ್ದು ಗೊತ್ತೇ ಇದೆ.
ಇನ್ನು ಧ್ರುವ ಸರ್ಜಾ ಅಭಿಮಾನಿಗಳು ಇಂದು ರೇಣುಕಾಸ್ವಾಮಿ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಮಹಾನ್ ಎಂಬುವವರು ಧನ ಸಹಾಯ ಕೂಡ ಮಾಡಿದ್ದಾರೆ.
ದರ್ಶನ್ ಆಪ್ತೆ ಪವಿತ್ರಾಗೌಡಗೆ ಮೃತ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನು ಸಂಚು ರೂಪಿಸಿ ಚಿತ್ರದುರ್ಗದಿಂದ ಅಪಹರಿಸಿ ಕೊಲ್ಲಲಾಗಿದೆ ಎಂಬ ಆರೋಪವಿದೆ. ಸದ್ಯ ಪ್ರಕರಣದಲ್ಲಿ ಹದಿನೇಳು ಆರೋಪಿಗಳು ಜೈಲು ಪಾಲಾಗಿದ್ದಾರೆ.