ಚಿಕ್ಕಮಗಳೂರು: ಆಸ್ತಿ ಕೈತಪ್ಪುತ್ತದೆ ಎಂಬ ದುರಾಸೆಯಿಂದ ಮೂವರು ಸಹೋದರಿಯರು ತಮ್ಮ ಬಾವನೊಂದಿಗೆ ಸೇರಿಕೊಂಡು ಒಡಹುಟ್ಟಿದ ಸಹೋದರನನ್ನೇ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ದುರ್ಘಟನೆ ಜಿಲ್ಲೆಯ ತರೀಕೆರೆ ನಗರದ ಚೌಡೇಶ್ವರಿ ಕಾಲೋನಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ೪೦ ವರ್ಷದ ರಾಘವೇಂದ್ರ ಎಂದು ಹೇಳಲಾಗಿದೆ. ಎಂದಿನಂತೆ ಮನೆಯಲ್ಲಿ ನೆಮ್ಮದಿಯಾಗಿ ಮಲಗಿದ್ದ ರಾಘವೇಂದ್ರ, ಬೆಳಗಿನಜಾವ ಕಣ್ಣು ಉಜ್ಜಿಕೊಳ್ಳುತ್ತಾ ಏಳಲು ಆರಂಭಿಸಿದ್ದ. ಇದೇ ವೇಳೆಗೆ ಮಾರಕಾಸ್ತ್ರಗಳಿಂದ ಸುತ್ತುವರಿದಿದ್ದ ಸಹೋದರಿಯರು, ಕಣ್ಣಿಗೆ ಖಾರದ ಪುಡಿ ಎರಚಿ ದಿಢೀರ್ ಎಂದು ಮೇಲೆರಗಿದ್ದಾರೆ.
ಚಾಕು ಮತ್ತು ಇನ್ನಿತರೇ ಆಯುಧಗಳಿಂದ ಭೀಕರವಾಗಿ ಹಲ್ಲೆ ಮಾಡಿದ್ದ ಪರಿಣಾಮ ವ್ಯಕ್ತಿ ಚೀರುತ್ತಾ ಕ್ಷಣಾರ್ಧದಲ್ಲೇ ಘಟನಾ ಸ್ಥಳದಲ್ಲೇ ಕೊನೆಯುಸಿರು ಚೆಲ್ಲಿದ್ದಾನೆ. ವಿಷಯ ತಿಳಿದ ಹಿರಿಯ ಪೊಲೀಸ್ ಅಧಿಕಾರಿಗಳು, ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೂಡ ನಡೆಸಲಾಗುತ್ತಿದೆ.