ಪನೈಯೂರ್: ತಮಿಳಿನ ಖ್ಯಾತ ನಟ ವಿಜಯ್ ಅವರು ರಾಜ್ಯ ರಾಜಕೀಯಕ್ಕೆ ಆಗಮಿಸಿರುವುದು ಹಳೆಯ ವಿಚಾರ. ಆದರೆ ನಟ ಇಂದು ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂನ ಧ್ವಜ & ಚಿಹ್ನೆಯನ್ನು ಬಿಡುಗಡೆ ಮಾಡಿದ್ದಾರೆ.
ಬಳಿಕ ಮಾತನಾಡಿ, ಪಕ್ಷದ ರಾಜ್ಯಮಟ್ಟದ ಸಮಾವೇಶಕ್ಕಾಗಿ ಜನ ಕಾತರದಿಂದ ಕಾಯುತ್ತಿದ್ದು, ಅದಕ್ಕಾಗಿ ನಾವೂ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ತಮಿಳುನಾಡಿನ ಜನರ ಶ್ರೇಯೋಭಿವೃದ್ಧಿಗಾಗಿ ನಾವು ಶ್ರಮಿಸುತ್ತೇವೆ ಎಂದಿದ್ದಾರೆ.
ಕೆಂಗಂದು ಮತ್ತು ಹಳದಿ ಬಣ್ಣದಿಂದ ಕೂಡಿರುವ ಧ್ವಜದ ಮಧ್ಯದಲ್ಲಿ ಎರಡೂ ಕಡೆ ಎರಡು ಆನೆಗಳಿದ್ದು, ಪರಸ್ಪರ ಮುಖ ಮಾಡಿಕೊಂಡು ನಿಂತಿವೆ. ಆನೆಗಳ ಮಧ್ಯದಲ್ಲಿ ನಕ್ಷತ್ರಗಳಿಂದ ಸುತ್ತುವರಿದ ನವಿಲಿದೆ. ಈ ಧ್ವಜವನ್ನು ತಮ್ಮ ಪಕ್ಷದ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ, ಬಳಿಕ ಪಕ್ಷದ ಅಧಿಕೃತ ಹಾಡನ್ನೂ ವಿಜಯ್ ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಇನ್ನು ಕಳೆದ ಫೆಬ್ರವರಿಯಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಘೋಷಿಸಿದ್ದ ವಿಜಯ್, ೨೦೨೬ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಗೆ ವಿಜಯ್ ಬೆಂಬಲಿಗರು ಕಣಕ್ಕಿಳಿದಿದ್ದರಾದರೂ ಯಾವುದೇ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಎಂಬುದು ಗಮನಾರ್ಹ.