ವರದಕ್ಷಿಣೆ ಕಿರುಕುಳ: ಸುಂದರಿ ಆತ್ಮಹತ್ಯೆಗೆ ಶರಣು

ಕೋಲಾರ: ವರದಕ್ಷಿಣೆ ಕಿರುಕುಳದಿಂದ ನೊಂದು ನವ ವಿವಾಹಿತೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಸಹಕಾರ ನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮಾನಸ(24) ಎಂದು ಗುರುತಿಸಲಾಗಿದೆ. ತೂರಾಂಡಹಳ್ಳಿಯ ಉಲ್ಲಾಸ್ ಗೌಡ ಎಂಬುವವರೊಂದಿಗೆ ಕಳೆದ ಒಂದು ವರ್ಷದ ಹಿಂದೆ ಮಾನಸಳನ್ನು ಮದುವೆ ಮಾಡಿಕೊಡಲಾಗಿತ್ತು. ಪತಿ ಇತ್ತೀಚೆಗೆ ಧನದಾಹಿಯಾಗಿ, ನಿತ್ಯ ವರದಕ್ಷಿಣೆಗಾಗಿ ಪೀಡಿಸುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ಮಹಿಳೆ, ನಾಲ್ಕೈದು ತಿಂಗಳಿನಿಂದ ತವರು ಮನೆ ಸೇರಿದ್ದಳು. ಆದರೂ ಪತಿ ವರದಕ್ಷಿಣೆ ತರುವಂತೆ ಕಿರುಕುಳ ಮುಂದುವರಿಸಿದ್ದ ಕಾರಣ ಮಹಿಳೆ ನಿನ್ನೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ಲಭಿಸಿದೆ.

ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಪತಿ ಮತ್ತು ಆತನ ಕುಟುಂಬಸ್ಥರು ತಲೆ ಮರೆಸಿಕೊಂಡಿದ್ದಾರೆ. ಅಲ್ಲದೆ ಮಹಿಳೆಯ ಕುಟುಂಬಸ್ಥರು ಪತಿಯ ಮನೆ ಎದುರೇ ಮಾನಸ ಅವರ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *