ಬೆಂಗಳೂರು: ಡಾ.ವಿಷ್ಣುವರ್ಧನ್ ಅವರ ಗತ್ತು, ಪರ್ಸನಾಲಿಟಿ ನನಗೆ ತುಂಬಾ ಇಷ್ಟ. ಅವರೇ ನನ್ನ ನೆಚ್ಚಿನ ನಾಯಕ ನಟ. ನನ್ನ ತಂದೆ ನನಗೆ ಹೀರೋ. ಈ ಇಬ್ಬರನ್ನು ಮಾತ್ರವೇ ನನ್ನ ಜೀವನದಲ್ಲಿ ನಾನು “ಬಾಸ್” ಎನ್ನುವುದು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿ, ನನ್ನ ತಂದೆ ಬಹುದೊಡ್ಡ ಉದ್ಯಮಿ. ಆದರೆ ನಾನು ಉದ್ಯಮಿ ಆಗಲ್ಲವೆಂದು ನನ್ನ ತಂದೆಗೆ ಗೊತ್ತಿತ್ತು. ನನಗೆ ಕ್ರಿಕೆಟರ್ ಆಗಬೇಕೆಂಬ ಆಸೆ ಇತ್ತು. ಅದಕ್ಕೆ ತಂದೆ ಅವಕಾಶ ಮಾಡಿಕೊಡಲಿಲ್ಲ. ನಟನಾಗಬೇಕೆಂಬ ಆಸೆಯೂ ಇತ್ತು. ಆಗ ಅಮ್ಮ ನನ್ನ ಪಕ್ಕ ನಿಂತು ಅವನಿಗೆ ಯಾವುದು ಇಷ್ಟವೋ ಅದು ಮಾಡಲು ಬಿಡಿ ಎಂದರು. ಆಗ ಅಪ್ಪ ಒಪ್ಪಿದರು.
ನಾವು ಸಿನಿಮಾ ರಂಗಕ್ಕೆ ಬಂದಾಗ ಡಾ.ರಾಜ್ ಕುಮಾರ್ ಸಿನಿಮಾಗಳನ್ನು ಮಾಡುತ್ತಿದ್ದರು. ಆದರೆ ಅಂಬರೀಷ್, ವಿಷ್ಣುವರ್ಧನ್ ನಟರಾಗಿಯೇ ಇದ್ದರು. ಆಗ ಶಿವಣ್ಣ ಹಾಗೂ ಉಪೇಂದ್ರ ಅವರೂ ಮಿಂಚುತ್ತಿದ್ದರು. ಅವರ ನಡುವೆ ನಾವೂ ಬೆಳೆಯುತ್ತೇವೆ ಎನಿಸುತ್ತಿರಲಿಲ್ಲ. ಯಾರೋ ಜಾಗ ಖಾಲಿ ಮಾಡಿದ್ದಾರೆ, ಅದನ್ನು ನಾವು ತುಂಬುತ್ತೇವೆ ಎಂದರೆ ಆಗಲ್ಲ. ಜನರ ಮನದಲ್ಲಿ ನಾವು ಮನೆ ಮಾಡಬೇಕು. ಆಗಲೇ ಬೆಳೆಯಲು ಸಾಧ್ಯ.
ಇನ್ನು 2001ರಲ್ಲಿ ಮದುವೆಯಾಗಿ 23 ವರ್ಷ ದಾಂಪತ್ಯ ಜೀವನ ಪೂರೈಸಿದ್ದೇವೆ. ಈ ನಡುವೆ ಸಾಕಷ್ಟು ಏರಿಳಿತಗಳು ಕಂಡಿದ್ದೇವೆ. ಸಂದಿಗ್ಧ ಪರಿಸ್ಥಿತಿಯಲ್ಲೂ ತನ್ನ ಜೀವನವನ್ನು ಬಿಟ್ಟು ನನ್ನ ಹೆಂಡತಿ ನನ್ನನ್ನು ಹ್ಯಾಂಡಲ್ ಮಾಡಿದಳು. ಆಕೆಗೆ ಒಂದು ಪ್ರಶಸ್ತಿ ನೀಡಲೇಬೇಕು ಎಂದಿದ್ದಾರೆ.